‘ಐರಾವತ’ದ ನಂತರ ಎ.ಪಿ.ಅರ್ಜುನ್ ಮತ್ತೆ ಬಂದಿದ್ದಾರೆ. ಎ.ಪಿ. ಅರ್ಜುನ್ ಈ ವರೆಗೆ ನಿರ್ದೇಶಿಸಿರುವ ನಾಲ್ಕು ಸಿನಿಮಾಗಳಲ್ಲಿ ದರ್ಶನ್ ಅವರ ‘ಐರಾವತ’ ಬಿಟ್ಟರೆ ಮಿಕ್ಕ ಅಂಬಾರಿ, ಅದ್ದೂರಿ ಮತ್ತು ರಾಟೆ ಸಿನಿಮಾಗಳಲ್ಲಿ ಹೊಸ ಹೀರೋಗಳಿದ್ದರು. ಈಗ ಅರ್ಜುನ್ ತಮ್ಮ ನಿರ್ದೇಶನದ ಐದನೇ ಚಿತ್ರ ‘ಕಿಸ್’ಗೂ ಹೊಸ ಹೀರೋನನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ತಮ್ಮ ಚಿತ್ರಕ್ಕೆ ಹೊಸ ಹುಡುಗರನ್ನು ಹುಡುಕುತ್ತಿರುವುದಾಗಿ ಅರ್ಜುನ್ ಅನೌನ್ಸ್ಮೆಂಟ್ ಕೊಟ್ಟಾಗ ಅವರ ಮೇಲ್ ಬಾಕ್ಸ್ಗೆ ಬಂದು ಬಿದ್ದಿದ್ದು ಬರೋಬ್ಬರಿ ನಾಲ್ಕು ಸಾವಿರದಷ್ಟು ಫೋಟೋಗಳು. ಅದರಲ್ಲಿ ನೂರಿಪ್ಪತ್ತು ಜನರನ್ನು ಆಯ್ಕೆ ಮಾಡಿಕೊಂಡು ಆಡಿಷನ್ ನಡೆಸಲಾಗಿತ್ತು. ಅದರಲ್ಲಿ ಎಂಟು ಜನ ಫೈನಲಿಸ್ಟ್ ಗಳಾಗಿದ್ದರು. ಆ ಅಂತಿಮ ಪಟ್ಟಿಯಲ್ಲಿ ಕಡೆಗೆ ಹೀರೋ ಆಗುವ ಅದೃಷ್ಟ ಒಲಿದಿದ್ದು ‘ವಿರಾಟ್’ ಎಂಬ ಯುವಕನಿಗೆ.
ಈ ಯುವ ಪ್ರತಿಭೆ ವಿರಾಟ್ ಆಡಿಷನ್ ಮೂಲಕ ಆಯ್ಕೆಯಾಗಿರೋದೇನೋ ಹೌದು. ಆದರೆ ಅರ್ಜುನ್ ಈ ಹುಡುಗನನ್ನು ಆಯ್ಕೆ ಮಾಡುವುದಕ್ಕಿಂತ ಮೊದಲು ಆತನನ್ನು ಆಯ್ಕೆ ಮಾಡಿದ್ದದ್ದು ಅರ್ಜುನ್ ಅವರ ತಾಯಿ. ಅರ್ಜುನ್ ಮನೆಯಲ್ಲಿಲ್ಲದ ಅನೇಕ ಸಂದರ್ಭದಲ್ಲಿ ವಿರಾಟ್ ‘ಅರ್ಜುನ್ ಸರ್ನ ಮೀಟ್ ಮಾಡಬೇಕು. ಅವರ ಸಿನಿಮಾದಲ್ಲಿ ನಟಿಸಬೇಕು’ ಎಂದು ಅವರ ತಾಯಿಯ ಬಳಿ ಅರ್ಜಿ ವಗಾಯಿಸಿ ಹೋಗುತ್ತಿದ್ದಂತೆ. ಹಾಗೆಯೇ ಒಮ್ಮೆ ಅರ್ಜುನ್ ಮನೆಯಲ್ಲಿದ್ದ ಸಂದರ್ಭದಲ್ಲೂ ವಿರಾಟ್ ಅರ್ಜುನ್ರ ಮನೆಗೆ ಹೋಗಿದ್ದರಂತೆ. ಆಗೆ ಖುದ್ದು ಭೇಟಿ ಮಾಡಿದ ನಿರ್ದೇಶಕರು “ನೀನು ನನ್ನ ಸಿನಿಮಾದಲ್ಲಿ ನಟಿಸುವ ಬಯಕೆ ಹೊಂದಿದ್ದರೆ, ಆಡಿಷನ್ ನಡೆಸುತ್ತಿದ್ದೇವೆ. ಅಲ್ಲಿಗೆ ಬಾ” ಎಂದಿದ್ದರಂತೆ. ಅರ್ಜುನ್ ಅವರ ಮಾತಿನಂತೆ ಆಡಿಷನ್ನಲ್ಲೂ ಪಾಲ್ಗೊಂಡ ವಿರಾಟ್ ಕಡೆಯ ಆರು ಜನರಲ್ಲಿ ಅಂತಿಮವಾಗಿ ಆಯ್ಕೆಯಾಗಿದ್ದಾರೆ.
ವಿರಾಟ್ ಮೂಲತಃ ಮೈಸೂರು ಹುಡುಗ. ‘ಜೊತೆಜೊತೆಯಲಿ’ ಎನ್ನುವ ಸೂಪರ್ ಹಿಟ್ ಧಾರಾವಾಹಿಯ ಲೀಡ್ ರೋಲ್ ನಲ್ಲೂ ಕಾಣಿಸಿಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ವಿರಾಟ್ಗೆ ಇದು ಮೊದಲ ಅನುಭವ. ಸಿನಿಮಾಗೆ ಎಂಟ್ರಿ ಕೊಡುತ್ತಿರುವುದರ ಪೂರ್ವಭಾವಿಯಾಗಿ ಕಳೆದ ಮೂರು ತಿಂಗಳಿನಿಂದ ಡ್ಯಾನ್ಸ್, ಫೈಟ್ ಮತ್ತು ಜಿಮ್ ಅನ್ನು ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದಾರೆ. ದುನಿಯಾ ವಿಜಿ, ಪ್ರೇಮ್, ಯಶ್ ಮುಂತಾದ ನಟರುಗಳನ್ನು ಕೋಚ್ ಆಗಿರುವ ಪಾನಿಪುರಿ ಕಿಟ್ಟಿ ಅವರೇ ವಿರಾಟ್ಗೂ ಜಿಮ್ ಗುರುಗಳಾಗಿದ್ದಾರೆ.
ವಿರಾಟ್ ಎಂಬ ನವಯುವಕ ಹೀರೋ ಆಗಿ ಆಯ್ಕೆಯಾಗುವ ಮೂಲಕ ‘ಕಿಸ್’ ಕೊಡಲು ರೆಡಿಯಾಗಿದ್ದಾರೆ. ಈತನ ಕಿಸ್ ಪಡೆಯುವ ಹುಡುಗಿಯಂತೂ ಇನ್ನೂ ಆಯ್ಕೆಯಾಗಿಲ್ಲ.. ಆ ಅದೃಷ್ಟ ಯಾರಿಗೆ ಒಲಿಯುತ್ತದೋ ಸದ್ಯಕ್ಕಂತೂ ಗೊತ್ತಾಗಿಲ್ಲ.
ಅಂದಹಾಗೆ, ‘ಕಿಸ್’ ಚಿತ್ರವನ್ನು ವಿ. ರವಿಕುಮಾರ್ ತಮ್ಮ ರಾಷ್ಟ್ರಕೂಟ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದು, ವಿ. ಹರಿಕೃಷ್ಣ ಸಂಗೀತ, ಕೆ. ರವಿವರ್ಮ ಸಾಹಸ, ದೀಪು ಎಸ್. ಕುಮಾರ್ ಸಂಕಲನ ಮತ್ತು ಗಿರೀಶ್ ಗೌಡ ಅವರ ಛಾಯಾಗ್ರಹಣವಿದೆ. ಬರುವ ಆಗಸ್ಟ್ ಮೊದಲ ವಾರದಿಂದ ಚಿತ್ರೀಕರಣ ಆರಂಭಗೊಳ್ಳಲಿದೆ.